ಕಲ್ಲಿಕೋಟೆ: ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ ಯಾಗಿ ಗರ್ಭಿಣಿ ಮೃತಪಟ್ಟ ದಾರುಣ ಘಟನೆ ಕಲ್ಲಿಕೋಟೆ ಕಕ್ಕರಮುಖ್ ಎಂಬಲ್ಲಿ ಸಂಭವಿಸಿದೆ. ಕಕ್ಕರಮುಖ್ ನಿವಾಸಿ ರಜಿಲ್ಲಾಲು ಎಂಬವರ ಪತ್ನಿ ಸೋನ (27)ಎಂಬವರು ಮೃತಪಟ್ಟ ದುರ್ದೈವಿ. ಕಾರು ಚಲಾಯಿಸುತ್ತಿದ್ದ ರಜಿಲ್ಲಾಲು ಗಂಭೀರ ಗಾಯಗೊಂಡಿದ್ದು, ಇವರಲ್ಲಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 9 ಗಂಟೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಸೋನಾರನ್ನು ಪೇರಾಂಬ್ರದ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೈದ ಬಳಿಕ ಮರಳಿ ಮನೆಗೆ ಬರುತ್ತಿದ್ದಾಗ ಕಾರು ಬೆಂಕಿಗಾಹುತಿಯಾಗಿದೆ. ಕಾರಿನ ಮುಂಭಾಗದಿಂದ ಬೆಂಕಿ ಹಾಗೂ ಹೊಗೆ ಕಂಡ ತಕ್ಷಣ ರಜಿಲ್ ಲಾಲ್ ಕಾರಿನಿಂದಿಳಿದಿದ್ದರು. ಈ ವೇಳೆ ಸೋನಾ ಕಾರಿನ ಹಿಂಬದಿ ಸೀಟಿನಲ್ಲಿ ಮಲಗಿದ್ದರೆನ್ನಲಾಗಿದೆ. ಕೂಡಲೇ ರಜಿಲ್ಲಾಲ್ ಸೋನರನ್ನು ಹೊರಕ್ಕಿಳಿಸಲು ಪ್ರಯತ್ನಿಸಿದರೂ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲವೆನ್ನಲಾಗಿದೆ.






