ಉಪ್ಪಳ: ಉಪ್ಪಳ ಗೇಟ್ ಪರಿಸರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹಗೊಳ್ಳುತ್ತಿರುವುದರಿಂದ ಸ್ಥಳೀಯರು ಸಮಸ್ಯೆಗೀಡಾಗಿದ್ದು, ಈ ನಿಟ್ಟಿನಲ್ಲಿ ಪರಿಸರದ ಸರ್ವೀಸ್ ರಸ್ತೆಯಲ್ಲಿ ಸುಮಾರು 300 ಮೀಟರ್ ರಸ್ತೆಯನ್ನು ಅಗೆದು ಇನ್ನೊಂದು ಚರಂಡಿ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಈ ಹಿಂದೆಯೇ ರಸ್ತೆಯ ಕಾಮಗಾರಿ ಪೂರ್ತಿಗೊಂಡಿದ್ದರೂ ಈ ಪರಿಸರದಲ್ಲಿ ವಿವಿಧ ಭಾಗದಿಂದ ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿರುವ ಮಳೆ ನೀರು ಚರಂಡಿಯಲ್ಲಿ ಹರಿದು ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಟ್ಟಿ ನಿಂತು ಪರಿಸರ ಮನೆಗಳಿಗೆ ಸಮಸ್ಯೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇನ್ನೊಂದು ಚರಂಡಿ ನಿರ್ಮಾಣಗೊಳ್ಳುತ್ತಿದೆ. ಇದರ ಕಾಮಗಾರಿ ಕಳೆದ ಎರಡು ವಾರದ ಹಿಂದೆ ಆರಂಭಗೊಂಡಿದೆ. ಇದರಿಂದ ಈ ಪರಿಸರದ ಸಮಸ್ಯೆಗೆ ಪರಿಹಾರ ಉಂಟಾಗಲಿದೆ. ಆದರೆ ಈಗ ಹೆದ್ದಾರಿ ಮೂಲಕ ಹಾದು ಹೋಗಿ ಉಪ್ಪಳ ಗೇಟ್ ನಿಲುಗಡೆಯ ಬದಲು ಅರ್ಧ ಕಿಲೋ ಮೀಟರ್ ದೂರದ ಹಿದಾಯತ್ ನಗರದಲ್ಲಿ ಬಸ್ ನಿಲ್ಲುತ್ತಿದೆ. ಇದು ಪ್ರಯಾಣೆಕರಿಗೆ ಸಮಸ್ಯೆ ಉಂಟುಮಾಡಿದೆ. ಕೂಡಲೇ ಚರಂಡಿಯ ಕೆಲಸವನ್ನು ಪೂರ್ತಿಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಊರವರು ಆಗ್ರಹಿಸಿದ್ದಾರೆ.





