ಉಪ್ಪಳ: ಗೋಣಿಚೀಲದಲ್ಲಿ ತುಂಬಿಸಿ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ಭಾರೀ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ವಶಪಡಿಸಿ ಓರ್ವನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ನಿವಾಸಿಯೂ, ಪ್ರಸ್ತುತ ಕುಂಜತ್ತೂರು ಮಾಸ್ಕೋಹಾಲ್ ಬಳಿ ವಾಸಿಸುವ ಭರತ್ ಸೋಂಕಾರ್ (30) ಎಂಬಾತನನ್ನು ಮಂಜೇಶ್ವರ ಎಸ್ಐ ಶಬರಿಕೃಷ್ಣ ಹಾಗೂ ತಂಡ ಬಂಧಿಸಿದೆ.
ಬಂಧಿತನ ಕೈಯಿಂದ ವಿವಿಧ ರೀತಿಯ 2990 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ನಿನ್ನೆ ಮಧ್ಯಾಹ್ನ 1.15ರ ವೇಳೆ ಕುಂಜತ್ತೂರಿನಲ್ಲಿ ಎಸ್ಐ ಶಬರಿಕೃಷ್ಣನ್ ನೇತೃತ್ವದ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಭರತ್ ಸೋಂಕಾರ್ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದಾನೆ. ಈತನ ಕೈಯ್ಯಲ್ಲಿದ್ದ ಗೋಣಿ ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ತಂಬಾಕು ಉತ್ಪನ್ನಗಳು ಪತ್ತೆಯಾಗಿದೆ. ಅವುಗಳನ್ನು ಮಾರಾಟಕ್ಕಾಗಿ ಆರೋಪಿ ಕೊಂಡೊಯ್ಯುತ್ತಿದ್ದಾನೆಂದು ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






