ಕಾಸರಗೋಡು: ನೀಟ್ ಪರೀಕ್ಷೆಯಲ್ಲಿ ನಡೆದ ಅವ್ಯವಹಾರ ಹಾಗೂ ಅದರಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೈಯ್ಯಬೇಕಾಗಿ ಬಂದಿರುವುದನ್ನು ಪ್ರತಿಭಟಿಸಿ ಎಸ್ಎಫ್ಐಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ನಿನ್ನೆ ಕಾಸರಗೋಡು ಪ್ರಧಾನ ಅಂಚೆ ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಿದುದಕ್ಕೆ ಸಂಬಂಧಿಸಿ ಕಾಸರಗೋಡು ಪೊಲೀಸರು ೨೦ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ರಸ್ತೆ ತಡೆ, ಸಾರ್ವಜನಿಕರಿಗೆ ಹಾಗೂ ಸಾರಿಗೆ ಸಂಚಾರಕ್ಕೆ ಅಡಚಣೆ ಸೃಷ್ಟಿಸಿದ ಆರೋಪದಂತೆ ಎಸ್ಎಫ್ಐ ಕಾರ್ಯಕರ್ತರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.
ಎಸ್ಎಫ್ಐ ಜಿಲ್ಲಾ ಕಾರ್ಯ ದರ್ಶಿ ಕೆ.ಪಿ. ವೈಷ್ಣವಿ, ಜಿಲ್ಲಾಧ್ಯಕ್ಷ ಅದಿನಾನ್, ಅನುರಾಜ್, ಅನಂತು ಮೋಹನನ್, ಅಬ್ದುಲ್ ಜೈಶಾದ್, ದಿಪಿನ್ ಸೇರಿದಂತೆ ಒಟ್ಟು 20 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನಾ ಗಾರರನ್ನು ತಡೆಗಟ್ಟಲು ಪೊಲೀಸರು ನಿನ್ನೆ ರಸ್ತೆಯಲ್ಲಿ ಬಾರಿಕೇಡ್ಗಳನ್ನು ಸ್ಥಾಪಿಸಿದ್ದರು. ಪ್ರತಿಭಟನೆಗಾರರು ಅದನ್ನು ದೂಡಿ ಮುಂದಕ್ಕೆ ಸಾಗಲೆತ್ನಿಸಿದಾಗ ಪೊಲೀಸರು ಅವರ ಮೇಲೆ ಜಲಫಿರಂಗಿ ಪ್ರಯೋಗ ನಡೆಸಿದರು. ಎಸ್ಎಫ್ಐ ಕೇಂದ್ರ ಸಮಿತಿ ಸದಸ್ಯ ಆರ್ಯಾಪ್ರಸಾದ್ ಮಾರ್ಚ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಅದಿನಾನ್ ಚಟ್ಟಂಚಾಲ್ ಅಧ್ಯಕ್ಷತೆ ವಹಿಸಿದರು. ಹಲವರು ಮಾತನಾಡಿದರು. ಹೊಸ ಬಸ್ ನಿಲ್ದಾಣದಿಂದ ಹೊರಟ ಮಾರ್ಚ್ ಪ್ರಧಾನ ಅಂಚೆಕಚೇರಿ ಮುಂದೆ ಸಮಾಪ್ತಿಗೊಂಡಿತು.






