ಮಂಜೇಶ್ವರ: ಲಕ್ಷಾಂತರ ರೂಪಾಯಿ ಮೌಲ್ಯದ ಆನೆ ದಂತಗಳ ಸಹಿತ ಮಂಜೇಶ್ವರ ನಿವಾಸಿ ಸೇರಿ ಮೂರು ಮಂದಿ ಮಂಗಳೂರಿನಲ್ಲಿ ಸೆರೆಗೀಡಾಗಿ ದ್ದಾರೆ. ಮಂಜೇಶ್ವರದ ಅಬ್ದುಲ್ ಖಾದರ್, ಬೆಳ್ತಂಗಡಿಯ ಶಶಾಂಕ, ಅತ್ತಾವರದ ಪ್ರಭಾಚಂದ್ರ ಎಂಬಿವರನ್ನು ಬೆಂಗಳೂರು- ಮಡಿಕೇರಿ ಫಾರೆಸ್ಟ್ ಎಸ್ಪಿ ಪವನ್ ನೆಜ್ಜೂರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಆನೆ ದಂತಗಳನ್ನು ಮಾರಾಟಗೈಯ್ಯಲು ತಂಡವೊಂದು ಮಂಗಳೂರಿನ ಮರೋಳಿಗೆ ಬರುತ್ತಿದೆ ಎಂಬ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತಲುಪಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ೪೨.೭೦೦ ಕಿಲೋ ತೂಕದ ಎರಡು ಆನೆ ದಂತಗಳು ಪತ್ತೆಯಾಗಿವೆ. ತಂಡಕ್ಕೆ ಆನೆ ದಂತಗಳು ಎಲ್ಲಿಂದ ಲಭಿಸಿದೆ ಎಂದು ತಿಳಿದು ಬಂದಿಲ್ಲ. ಈ ಕುರಿತಾಗಿ ತನಿಖೆಯನ್ನು ಕೇರಳಕ್ಕೆ ವಿಸ್ತರಿಸಲಾಗಿದೆ. ಪೊಲೀಸ್ ತಂಡದಲ್ಲಿ ಮಂಗಳೂರು ಸಿಐಡಿ ಸಬ್ ಇನ್ಸ್ಪೆಕ್ಟರ್ ಜಿ.ಆರ್. ದಿಲೀಪ್, ಕೆ.ಟಿ. ಜಯರಾಮ, ಕೆ.ಎಂ. ಬಾಲಕೃಷ್ಣ, ಎಸ್. ತಾರಾ ನಾಧ, ಅಬ್ದುಲ್ ರೌಫ್ ಎಂಬಿವರಿದ್ದರು.







