ಇಂಜಿನ್ ಕೆಟ್ಟು ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡ ದೋಣಿ: ಕೋಸ್ಟಲ್ ಪೊಲೀಸರಿಂದ ಕಾರ್ಮಿಕರ ರಕ್ಷಣೆ

ಉಪ್ಪಳ: ಮೀನುಗಾರಿಕೆಗೆ ತೆರಳಿ ಹಿಂತಿರುಗುತ್ತಿರುವ ಮಧ್ಯೆ ಇಂಜಿನ್ ಹಾನಿಗೊಂಡು ದೋಣಿ ಸಮುದ್ರ ಮಧ್ಯೆ ಸಿಲುಕಿಕೊಂಡ ಘಟನೆ ನಡೆದಿದ್ದು, ನಾಲ್ಕು ಮೀನು ಕಾರ್ಮಿಕರನ್ನು ಫಿಶರೀಸ್ ಇಲಾಖೆ, ಕೋಸ್ಟಲ್ ಪೊಲೀಸರು ಸೇರಿ ಪಾರು ಮಾಡಿದ್ದಾರೆ. ನಿನ್ನೆ ಮುಂಜಾನೆ ಉಪ್ಪಳ ಮುಸೋಡಿಯಿಂದ ಮೀನುಗಾರಿಕೆಗೆಂದು ತೆರಳಿದ ಕಾರ್ಮಿಕರು ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದರು.

ಉಪ್ಪಳ ಶಾರದಾನಗರ ನಿವಾಸಿ ವಿಕ್ರಮ್ ಎಂ. ಉಚ್ಚಿಲ್ ಎಂಬವರ ಮಾಲಕತ್ವದ ಗುತ್ತಿಯಮ್ಮ ಭಗವತಿ ಎಂಬ ಹೆಸರಿನ ಇಂಜಿನ್ ಅಳವಡಿಸಿದ ದೋಣಿ ಮಂಜೇಶ್ವರದಿಂದ ಸುಮಾರು ೧೦ ನೋಟಿಕಲ್ ಮೈಲು ದೂರದಲ್ಲಿ ಹಾನಿಗೀಡಾಗಿತ್ತು. ಕಡಲಬ್ಬರಕ್ಕೆ ಸಿಲುಕಿ ದೋಣಿ ನಿಯಂತ್ರಣ ತಪ್ಪಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಕೋಸ್ಟಲ್ ಪೊಲೀಸರನ್ನು ಸಂಪರ್ಕಿಸಿದ್ದರು. ಮಧ್ಯಾಹ್ನದ ವೇಳೆ ಕೋಸ್ಟಲ್ ಪೊಲೀಸರು ಹಾಗೂ ಫಿಶರೀಸ್ ಇಲಾಖೆಯ ರೆಸ್ಕ್ಯೂ ತಂಡ ಘಟನೆ ಸ್ಥಳಕ್ಕೆ ತಲುಪಿ ದೋಣಿಯಲ್ಲಿ ಸಿಲುಕಿದ್ದ ನಾಲ್ಕು ಮಂದಿ ಕಾರ್ಮಿಕರನ್ನು ಪಾರು ಮಾಡಿದ್ದಾರೆ. ಬಳಿಕ ಹಗ್ಗ ಕಟ್ಟಿ ದೋಣಿಯನ್ನು ಕೂಡಾ ದಡಕ್ಕೆ ತರಲಾಗಿದೆ.

You cannot copy contents of this page