ಕಾಸರಗೋಡು: ತೀವ್ರ ಮಳೆ ಹಿನ್ನೆಲೆಯಲ್ಲಿ ಕಾಸರ ಗೋಡು- ಕಾಞಂಗಾಡ್ ಕೆಎಸ್ಟಿಪಿ ರಸ್ತೆಯಲ್ಲಿ ಗುಡ್ಡೆ ಕುಸಿದಿದೆ. ಚಂದ್ರಗಿರಿ, ಚಳಿಯಂಗೋಡು, ಕೋಟರು ವತ್ನಲ್ಲಿ ಇಂದು ಬೆಳಿಗ್ಗೆ ಅಪಾಯ ಉಂಟಾಗಿದೆ. ಮಣ್ಣು ಕುಸಿಯುವುದನ್ನು ತಡೆಯುವುದಕ್ಕಾಗಿ ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆಯ ಮೇಲಿನ ಭಾಗದಿಂದ ಮಣ್ಣು ಹಾಗೂ ಬಂಡೆಕಲ್ಲುಗಳು ರಸ್ತೆಗೆ ಬಿದ್ದಿದೆ. ಬೃಹತ್ ಗಾತ್ರದ ಬಂಡೆಕಲ್ಲು ಆ ದಾರಿಯಾಗಿ ಸಾಗುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಇದರಿಂದ ಕಾರಿನ ಮುಂಭಾಗ ಹಾನಿಗೊಂಡಿದೆ. ಇದರಿಂದಾಗಿ ಈ ರಸ್ತೆ ಮೂಲಕ ವಾಹನ ಸಂಚಾರ ಅಲ್ಪಹೊತ್ತು ಮೊಟಕುಗೊಂಡಿತ್ತು. ಮಾಹಿತಿ ತಿಳಿದು ಪೊಲೀಸರು ಹಾಗೂ ಅಗ್ನಿಶಾಮಕ ದಳ, ಸ್ಥಳೀಯರು ಸ್ಥಳಕ್ಕೆ ತಲುಪಿ ಜೆಸಿಬಿ ಉಪಯೋಗಿಸಿ ಮಣ್ಣು, ಕಲ್ಲನ್ನು ತೆರವುಗೊಳಿಸಿದ ಬಳಿಕ ಸಂಚಾರ ಪುನರಾರಂಭಿಸಲಾಗಿದೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.







