ಕಾಸರಗೋಡು: ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿ ಉಂಟಾಗಿರುವ ದುರಂತಗಳಿಗೆ ಶೀಘ್ರದಲ್ಲಿಯೇ ನಷ್ಟ ಪರಿಹಾರ ಲಭ್ಯಗೊಳಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ವಿಕೋಪ ನಿವಾರಣಾ ಪ್ರಾಧಿಕಾರದ ಸಭೆಯಲ್ಲಿ ಆಗ್ರಹಿಸಲಾಗಿದೆ. ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅಧ್ಯಕ್ಷತೆ ವಹಿಸಿದರು.
ಹವಾಮಾನಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಏರ್ಪಟ್ಟಿರುವ ಅಧಿಕಾರಿಗಳು ಯಾವುದೇ ಸನ್ನಿವೇಶವನ್ನು ಎದುರಿಸಲು ಯಾವಾಗಲೂ ಸಿದ್ಧರಾಗಿರಬೇಕೆಂದು, ದುರಂತಗಳು ಸಂಭವಿಸಿದರೆ ಕೂಡಲೇ ಮಧ್ಯಪ್ರವೇಶಿಸಿ ಶೀಘ್ರವೇ ನಷ್ಟ ಪರಿಹಾರ ಲಭ್ಯಗೊಳಿಸುವು ದಕ್ಕಿರುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದರು. ಶಿಬಿರಗಳನ್ನು ಸಜ್ಜುಗೊಳಿಸಬೇಕಾದ ಸಿದ್ಧತೆಗಳನ್ನು ಮುಂದಾಗಿಯೇ ಕಂಡುಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ಮೂರು ಮನೆಗಳು ಸಂಪೂರ್ಣವಾಗಿ ಹಾಗೂ ೧೦ ಮನೆಗಳು ಆಂಶಿಕವಾಗಿ ಹಾನಿಗೀಡಾಗಿವೆ. ಕಾಸರಗೋಡು ತಾಲೂಕಿನಲ್ಲಿ ಇಬ್ಬರು ಮಕ್ಕಳು ಆವರಣಗೋಡೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಚಂದ್ರಗಿರಿ ಹೊಳೆಯಲ್ಲಿ ಜಲಮಟ್ಟ ಹೆಚ್ಚುತ್ತಿರುವುದಾಗಿ ನಿನ್ನೆ ಮಧ್ಯಾಹ್ನ ೧೨ ಗಂಟೆಗೆ ಕೇಂದ್ರ ಜಲ ಪ್ರಾಧಿಕಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅಗತ್ಯದ ಸಜ್ಜೀಕರಣಗಳನ್ನು ಖಚಿತಪಡಿಸಲಾಗಿದೆ ಎಂದು ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ ತಿಳಿಸಿದ್ದಾರೆ. ಆನ್ಲೈನ್ ಮೂಲಕ ಜರಗಿದ ಸಭೆಯಲ್ಲಿ ಎಡಿಎಂ ಪಿ. ಉದಯ ಕುಮಾರ್ ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು. ತಹಶೀಲ್ದಾರ್ಗಳಾದ ಪ್ರೇಮ್ರಾಜ್, ವಿ. ಶ್ರೀಕುಮಾರ್. ಕೆ. ರಮೇಶನ್, ಕೆ.ಬಿ. ರಾಮು, ಎಲ್ಎಸ್ಜಿಡಿ ಜೋಯಿಂಟ್ ಡೈರೆಕ್ಟರ್, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.







