ಕಾಸರಗೋಡು: ವಿಕಲ ಚೇತನಳಾದ 17ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೋಟಿಕುಳಂ ರೈಲ್ವೇ ನಿಲ್ದಾಣ ಸಮೀಪದ ಸಾಲಿ ಯಾನೆ ಮುಹಮ್ಮದ್ ಸಾಲಿಹ್ (29), ಪೆರುಂಬಳ ಕೋಳಿಯಡ್ಕದ ಶೆರೀಫ್ ಕಡಪ್ಪಳ್ಳಂ ಯಾನೆ ಕೆ.ಪಿ. ಶರೀಫ್ (40),ಮೈಲಾಟಿ ಕುಟ್ಟಪ್ಪುನ್ನ ಕುರುಕನ್ಕುನ್ನು ನಿವಾಸಿಯೂ ಪ್ರಸ್ತುತ ತಚ್ಚಂಗಾಡ್ ಅರಬಿಪಳ್ಳಿ ಸಮೀಪ ವಾಸಿಸುವ ಎ.ಟಿ. ಮುಹಮ್ಮದ್ ನೌಶಾದ್ (39) ಎಂಬಿವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಇವರ ಪೈಕಿ ನೌಶಾದ್ ಹಾಗೂ ಶೆರೀಫ್ ಆಟೋ ಚಾಲಕರಾಗಿದ್ದಾರೆ. ಮುಹಮ್ಮದ್ ಸಾಲಿಹ್ ತರಕಾರಿ ಅಂಗಡಿಯ ನೌಕರನಾಗಿದ್ದಾನೆ. ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಬಾಲಕಿಗೆ ಕಿರುಕುಳ ನೀಡಿರುವ ಬಗ್ಗೆ ಮಾಹಿತಿ ಲಭಿಸಿದ ಚೈಲ್ಡ್ ವೆಲ್ಫೇರ್ ಕಮಿಟಿ ನೀಡಿದ ವರದಿಯ ಆಧಾರದಲ್ಲಿ ಬೇಕಲ ಪೊಲೀಸರು 5 ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಪಳ್ಳಿಕ್ಕೆರೆ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿಗೆ ಆರೋಪಿಗಳು ಕಿರುಕುಳ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






