ಕಾಸರಗೋಡು: ಎಡರಂಗ ಆಡಳಿತ ನಡೆಸಿದರೂ ಐಕ್ಯರಂಗ ಆಡಳಿತ ನಡೆಸಿದರೂ ಕೇರಳದ ಮೀನುಕಾರ್ಮಿಕರಿಗೆ ಟ್ರೋಲಿಂಗ್ ನಿಷೇಧವಿರುವ ತಿಂಗಳುಗಳು ಉಪವಾಸದ ದಿನಗಳಾಗಿವೆ, ಪೆನ್ಶನ್, ರೇಶನ್ ನೀಡುವುದು ವಿಳಂಬವಾಗುತ್ತಿರುವುದು ಸಾಮಾನ್ಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು.
ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಆಯೋಜಿಸಿದ ಕಾಸರಗೋಡು ಫಿಶರೀಸ್ ಕಚೇರಿ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆಧುನಿಕ ವಿಜ್ಞಾನ ತಾಂತ್ರಿಕ ವಿದ್ಯೆಯ ಸಹಾಯದೊಂದಿಗೆ ನರೇಂದ್ರ ಮೋದಿ ಸರಕಾರ ಮೀನು ಕಾರ್ಮಿಕರ ಭದ್ರತೆ, ಕ್ಷೇಮವನ್ನು ಜ್ಯಾರಿಗೊಳಿಸುತ್ತಿರುವಾಗ ಅರ್ಹವಾದ ಸೌಲಭ್ಯ ಕೂಡಾ ಖಚಿತಪಡಿಸಲು ರಾಜ್ಯ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.
೭೦ ಕೋಟಿ ರೂ. ವೆಚ್ಚದಲ್ಲಿ ಕಾಸರಗೋಡು ಹಾರ್ಬರ್ನ ಅಭಿವೃದ್ಧಿ ಪೂರ್ತಿಯಾದರೆ ಮೀನು ಕಾರ್ಮಿಕರಿಗೆ ಇನ್ನಷ್ಟು ಸುರಕ್ಷಿತತೆಯಲ್ಲಿ ಮೀನುಗಾರಿಕೆ ನಡೆಸಬಹುದೆಂದು, ಆದಾಯ ಹೆಚ್ಚಬಹುದೆಂದು ಅಶ್ವಿನಿ ನುಡಿದರು. ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೆ.ಪಿ. ವತ್ಸರಾಜ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಭಗೀಶ್ ಪುರಾಡನ್, ಕೆ. ಶೈಬು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕುಲಾಲ್, ಜಿಲ್ಲಾ ಉಪಾಧ್ಯಕ್ಷ ಟಿ.ವಿ. ಮುರಳಿಕುಮಾರ್, ಜಿಲ್ಲಾ ಸೆಲ್ ಕೋ-ಆರ್ಡಿನೇಟರ್ ಸುಕುಮಾರ್ ಕುದ್ರೆಪ್ಪಾಡಿ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಕೆ.ಎಸ್. ರಮಣಿ, ಕಾಸರಗೋಡು ಮಂಡಲ ಅಧ್ಯಕ್ಷ ಅಶೋಕ್ ಚೆಟ್ಟಿಯಾರ್ ಮಾತನಾಡಿದರು.







