ಕಾಸರಗೋಡು: ಕೇಂದ್ರ ಸರಕಾರದ ಯೋಜನೆಯಾದ ಸ್ಟ್ರೀಟ್ ವೆಂಡರ್ ಸೆಂಟ್ರಲೈಸ್ಡ್ ರಿಹಾಬಿಲಿಟೇಶನ್ನಂಗವಾಗಿ ಹೊಸ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ ಅಂಗಡಿ ಸಮುಚ್ಚಯದ ದುರುಪಯೋಗ ನಡೆಯುತ್ತಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು, ಅರ್ಹರಾದವರಿಗೆ ಮಾತ್ರವೇ ಅಂಗಡಿ ಲಭ್ಯಗೊಳಿಸಬೇಕು, ಅನರ್ಹವಾಗಿ ಸ್ವಾಧೀನಪಡಿಸಿರುವುದನ್ನು ಹೊರತುಪಡಿಸಿ ಕ್ರಮ ಕೈಗೊಳ್ಳಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಬಿಜೆಪಿ ನಗರಸಭಾ, ವೆಸ್ಟ್ ಮತ್ತು ಈಸ್ಟ್ ಕಮಿಟಿಗಳ ಸಂಯುಕ್ತ ತಂಡ ನಗರಸಭಾ ಕಾರ್ಯದರ್ಶಿ, ಉಪಾಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
ಈ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ತಂಡ ಆಗ್ರಹಿಸಿದೆ. ತಂಡದಲ್ಲಿ ವರಪ್ರಸಾದ್ ಕೋಟೆಕಣಿ, ಪುರುಷೋತ್ತಮ ತಾಳಿಪಡ್ಪು, ಚೇತನ ಕೊಲ್ಲಮೆ, ರಾಮಮೋಹನ್ ಕೊರಕ್ಕೋಡು, ರವೀಂದ್ರ ಕರಂದಕ್ಕಾಡ್, ಹರೀಶ್, ರಾಜೇಶ್ ಅಮೈ, ದಿವ್ಯ, ರಾಮಕೃಷ್ಣ ಹೊಳ್ಳ, ಉಮ, ಶ್ರೀಲತ ಎಂಬಿವರು ಭಾಗವಹಿಸಿದರು. ಈ ಬಗ್ಗೆ ಕ್ರಮವುಂಟಾಗದಿದ್ದರೆ ತೀವ್ರ ಆಂದೋಲನಕ್ಕೆ ಪಕ್ಷ ಮುಂದಾಗಲಿದೆ ಎಂದು ತಂಡ ಎಚ್ಚರಿಸಿದೆ.







