ಕಾಸರಗೋಡು: ಕರ್ನಾಟಕದಿಂದ ಕುಡಿಯುವ ನೀರು ವಿತರಣೆಗಾಗಿರುವ ಪೈಪ್ಗಳ ಸಹಿತ ಆಗಮಿಸುತ್ತಿದ್ದ ಲಾರಿ ಮಾಣಿಮೂಲ ಕುಳಿಂಜಾಲ್ ಎಂಬಲ್ಲಿಗೆ ಸಮೀಪ ನಿಯಂತ್ರಣ ತಪ್ಪಿ ನೂರು ಅಡಿ ಆಳಕ್ಕೆ ಮಗುಚಿದೆ. ನಿನ್ನೆ ರಾತ್ರಿ 10 ಗಂಟೆಗೆ ಈ ಅಪಘಾತ ಸಂಭವಿಸಿದೆ. ತಲೆಕೆಳಗಾಗಿ ಮಗುಚಿ ಬಿದ್ದ ಲಾರಿಯ ಕ್ಯಾಬಿನ್ನ ಒಳಗೆ ಚಾಲಕ ಸಿಲುಕಿಕೊಂಡಿದ್ದು, ಬಳಿಕ ಕ್ಯಾಬಿನ್ ಮುರಿದು ಚಾಲಕನನ್ನು ಮೇಲೆತ್ತಲಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಮತ್ತು ಸ್ಥಳೀಯರು ಜಂಟಿಯಾಗಿ ಅರ್ಧ ಗಂಟೆ ಕಾಲ ನಡೆಸಿದ ಸಾಹಸಿಕ ರಕ್ಷಣಾ ಕಾರ್ಯಾಚರಣೆ ಮೂಲಕ ಚಾಲಕನನ್ನು ಪಾರು ಮಾಡಲಾಗಿದೆ. ಗಾಯಗೊಂಡ ಈತನನ್ನು ಕೂಡಲೇ ಕಾಞಂಗಾಡ್ ಆಸ್ಪತ್ರೆಗೆ ದಾಖಲಿಸ ಲಾಗಿದೆ.
ಕುತ್ತಿಕ್ಕೋಲ್ ಪಂಚಾಯತ್ನಲ್ಲಿ ಕುಡಿಯುವ ನೀರು ವಿತರಣೆ ಯೋಜನೆಗೆ ಬೇಕಾಗಿ ಪೈಪ್ ಸಹಿತ ಆಗಮಿಸುತ್ತಿದ್ದ ಲಾರಿ ಅಪಘಾತಕ್ಕೀ ಡಾಗಿತ್ತು. ಹಲವಾರು ಅಪಘಾತಗಳು ನಡೆಯುವ ಈ ಪ್ರದೇಶದಲ್ಲಿ ರಸ್ತೆಯ ಅವೈಜ್ಞಾನಿಕತೆಯೇ ಸಮಸ್ಯೆಗೆ ಕಾರಣವೆಂದು ಸ್ಥಳೀಯರು ದೂರುತ್ತಾರೆ.






