ಮಂಜೇಶ್ವರ ತಾಲೂಕು ಕಚೇರಿಯ ಕ್ಲರ್ಕ್ ಕುಸಿದು ಬಿದ್ದು ಮೃತ್ಯು
ಉಪ್ಪಳ: ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿಯ ಕ್ಲರ್ಕ್ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪೆರ್ಮುದೆ ಬಳಿಯ ಕಟ್ಟದ ಕಾಡು ನಿವಾಸಿ ಶಂಕರ ಗೌಡ ಕೆ. (೫೬) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ತಾಲೂಕು ಕಚೇರಿಯಿಂದ ಮೊನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳಲು ಬಸ್ಗಾಗಿ ನಡೆದು ಹೋಗುತ್ತಿದ್ದಾಗ ಕಚೇರಿ ಸಮೀಪದ ರಸ್ತೆ ಬದಿಯಲ್ಲಿ ಕುಸಿದು ಬಿದ್ದಿದ್ದಾರೆ. ಮಾಹಿತಿ ತಿಳಿದು ತಲುಪಿದ ಸಹೋದ್ಯೋಗಿಗಳು ಕೂಡಲೇ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಪ ಹೊತ್ತಿನಲ್ಲಿ ಇವರು ಮೃತಪಟ್ಟರು. ಮೇ ತಿಂಗಳಲ್ಲಿ ನಿವೃತ್ತಿ ಹೊಂದುವವರಾಗಿದ್ದಾರೆ. ಧರ್ಮತ್ತಡ್ಕ ಸಾರ್ವಜನಿಕ ಲೈಬ್ರೆರಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಇವರು, ಅಖಿಲ ಕೇರಳ ಮಲೆಕುಡಿ/ ಕುಡಿಯ ಸಮಾಜದ ಸಂಚಾಲಕರಾಗಿದ್ದರು. ಉದ್ಯೋಗ ಲಭಿಸುವ ಮೊದಲು ಇವರು ಪುತ್ತಿಗೆ ಪಂಚಾಯತ್ನಲ್ಲಿ ಬಿಜೆಪಿ ಸದಸ್ಯರಾಗಿದ್ದರು. ಮೃತದೇಹವನ್ನು ನಿನ್ನೆ ತಾಲೂಕು ಕಚೇರಿ ಹಾಗೂ ಧರ್ಮತ್ತಡ್ಕ ಶಾಲೆಯ ಲೈಬ್ರೆರಿಯಲ್ಲಿ ದರ್ಶನಕ್ಕೆ ಇರಿಸಿದ ಬಳಿಕ ಮಧ್ಯಾಹ್ನ ಕಟ್ಟದಕಾಡು ಮನೆ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.