ಕುಂಬಳೆ: ಅನಧಿಕೃತವಾಗಿ ಕೆಂಪು ಕಲ್ಲು ಹಾಗೂ ಮಣ್ಣು ಸಾಗಾಟ ದಂಧೆಯ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದರಂತೆ ಕುಂಬಳೆ ಪೊಲೀಸ್ ಇನ್ಸ್ಪೆಕ್ಟರ್ ಅನೂಪ್ಕೃಷ್ಣ ಆರ್.ಪಿ, ಎಸ್ಐ ಕೆ.ಪಿ. ಗಣೇಶ್ ನೇತೃತ್ವದಲ್ಲಿ ನಿನ್ನೆ ರಾತ್ರಿ ನಡೆಸಿದ ಕಾರ್ಯಾಚ ರಣೆಯಲ್ಲಿ ನಾಯ್ಕಾಪು ಬಳಿಯ ಪೆರ್ಣೆಯಿಂದ ಕೆಂಪುಕಲ್ಲು ಸಹಿತ ಲಾರಿಯನ್ನು ವಶಕ್ಕೆ ತೆಗೆಯಲಾಗಿದೆ. ಈ ಸಂಬಂಧ ಲಾರಿಯ ಚಾಲಕ ಕಲ್ಲಿಕೋಟೆ ಕರಿಪ್ಪೂರ್ ನಿವಾಸಿ ಕೃಷ್ಣದಾಸ್ (35) ಎಂಬಾತನನ್ನು ಬಂಧಿಸಲಾಗಿದೆ. ಕುಂಬಳೆ ಠಾಣೆ ವ್ಯಾಪ್ತಿ ಪ್ರದೇಶದಿಂದ ಮಣ್ಣು ಹಾಗೂ ಕೆಂಪು ಕಲ್ಲುಗಳನ್ನು ಇತರ ಜಿಲ್ಲೆ ಹಾಗೂ ರಾಜ್ಯಗಳಿಗೆ ವ್ಯಾಪಕವಾಗಿ ಸಾಗಿಸಲಾಗುತ್ತಿದೆ ಯೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇದರ ವಿರುದ್ಧ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.






