ಕಾಸರಗೋಡು: ಕೆಎಸ್ಇಬಿಯ ವಿದ್ಯುತ್ ವಿತರಣೆ ಶೃಂಖಲೆಗಳಲ್ಲಿ ಬ್ಯಾನರ್ಗಳು, ಫ್ಲೆಕ್ಸ್ ಬೋರ್ಡ್ ಗಳು, ಹಾರ್ಡಿಂಗ್ಗಳನ್ನು ಸ್ಥಾಪಿಸಬಾರದೆಂದು ಕಾಸರಗೋಡು ಇಲೆಕ್ಟ್ರಿಸಿಟಿ ಸರ್ಕಲ್ ಡೆಪ್ಯುಟಿ ಚೀಫ್ ಇಂಜಿನಿಯರ್ ತಿಳಿಸಿದ್ದಾರೆ. ಈ ರೀತಿಯ ಬೋರ್ಡ್ಗಳು ಸ್ಥಾಪಿಸುವುದು ಗಂಭೀರ ವಿದ್ಯುತ್ ಅಪಘಾತಗಳಿಗೆ ಕಾರಣವಾಗಬ ಹುದು. ಈ ರೀತಿಯ ಚಟುವಟಿಕೆಗಳು ಕಾನೂನು ಬಾಹಿರ ಹಾಗೂ ೨೦೦೩ರ ಕೇಂದ್ರ ಇಲೆಕ್ಟ್ರಿಸಿಟಿ ಆಕ್ಟ್ ಪ್ರಕಾರ ಶಿಕ್ಷಾರ್ಹವಾದ ಅಪರಾಧವಾಗಿದೆ.
ಮಳೆ ಹಾಗೂ ಗಾಳಿ ಇರುವ ಸಮಯಗಳಲ್ಲಿ ಒದ್ದೆಯಾದ ಬ್ಯಾನರ್ಗಳು, ಫ್ಲೆಕ್ಸ್ಗಳು ವಿದ್ಯುತ್ ತಂತಿಗಳಿಗೆ ಸ್ಪರ್ಷಿಸುತ್ತಿರುವುದರ ಮೂಲಕ ದುರಂತಿಗಳು ಉಂಟಾಗಬಹುದು. ಅಲ್ಲದೆ ತಂತಿಗಳಿಗೆ ಉಂಟಾಗುವ ಹಾನಿಯನ್ನು ಪರಿಹರಿಸಲು ಕೆಎಸ್ಇಬಿ ನೌಕರರು ಕಂಬಗಳಿಗೆ ಹತ್ತುವುದಕ್ಕೆ ಈ ರೀತಿಯ ಬೋರ್ಡ್ಗಳು ತಡೆ ಸೃಷ್ಟಿಸುತ್ತಿವೆ. ತೀವ್ರವಾದ ಗಾಳಿಗೆ ಫ್ಲೆಕ್ಸ್ಗಳು ಹಾರಿ ಹೋಗಿ ತಂತಿಗಳಲ್ಲಿ ಸಿಲುಕಿಕೊಳ್ಳುತ್ತಿರುವ ಮೂಲಕ ಶಾರ್ಟ್ ಸರ್ಕ್ಯೂಟ್ ಕೂಡಾ ಉಂಟಾಗುತ್ತಿದ್ದು, ವಿದ್ಯುತ್ ಮೊಟಕಿಗೂ ಇದು ಕಾರಣವಾಗುತ್ತಿದೆ. ಆದುದರಿಂದ ಸಾರ್ವಜನಿಕರು, ವಿವಿಧ ಸಂಘಟನೆಗಳು, ರಾಜಕೀಯ, ಸಾಮಾಜಿಕ ಸಂಸ್ಥೆಗಳು ಈ ರೀತಿಯ ಸಾಮಗ್ರಿಗಳನ್ನು ವಿದ್ಯುತ್ ಶೃಂಖಲೆಗಳಲ್ಲಿ ಸ್ಥಾಪಿಸುವುದನ್ನು ಕೈ ಬಿಡಬೇಕೆಂದು, ವಿದ್ಯುತ್ ಕಂಬಗಳಿಗೆ ಅನುಮತಿರಹಿತ ವಾಗಿ ಬಣ್ಣ ಹಚ್ಚುವುದು ಮೊದಲಾದ ಚಟುವಟಿಕೆಗಳನ್ನು ಮಾಡಬಾರದೆಂದು ಕೆಎಸ್ಇಬಿ ಅಧಿಕಾರಿಗಳು ತಿಳಿಸಿದ್ದಾರೆ.






