ಕುಂಬಳೆ: ಕೋಟೆಕಾರಿನಲ್ಲಿ ಕಾಂಗ್ರೆಸ್ ಮಂಡಲ ಅಧ್ಯಕ್ಷ ರವಿ ಪೂಜಾರಿಯವರ ಸಹೋದರ ಮೈದಾನ ಸಮೀಪ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿರುವುದು ತಲೆಯ ರಕ್ತಸ್ರಾವದ ಹಿನ್ನೆಲೆಯಲ್ಲಿ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಸಾವಿನಲ್ಲಿನ ನಿಗೂಢತೆ ಇಲ್ಲದಾಗಿದೆ ಎಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬೆಳಿಗ್ಗೆ ಕೋಟೆಕಾರಿನ ಸುನಿಲ್ ಕುಮಾರ್ (40)ರನ್ನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಪೈಂಟಿಂಗ್ ಕಾರ್ಮಿಕನಾದ ಸುನಿಲ್ ಕುಮಾರ್ ಮಂಗಳವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತಲುಪಿರಲಿಲ್ಲ.
ಈ ಮಧ್ಯೆ ಮೃತದೇಹದ ಮೂಗಿನಿಂದ ರಕ್ತ ಹರಿಯುತ್ತಿದ್ದ ಸ್ಥಿತಿಯಲ್ಲಿ ಕೋಟೆಕಾರಿನ ಮೈದಾನ ಸಮೀಪದಲ್ಲಿ ಕಂಡು ಬಂದಿದ್ದರು. ಮಹಜರಿನ ಬಳಿಕ ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿತ್ತು. ರಕ್ತದೊತ್ತಡ ಹೆಚ್ಚಾಗಿರುವುದೇ ತಲೆಯೊಳಗೆ ರಕ್ತಸ್ರಾವ ಉಂಟಾಗಲು ಕಾರಣವಾಗಿದ್ದು, ಇದರಿಂದ ಸಾವು ಸಂಭವಿಸಿರಬೇಕೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸೂಚಿಸಲಾಗಿದೆ.






