ಬೋಳಂಗಳದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯದಿಂದ ಸಾಂಕ್ರಾಮಿಕರೋಗ ಭೀತಿ: ಕಸ ತೆರವುಗೊಳಿಸಿ ಶುಚಿಗೊಳಿಸಲು ಡಿಫಿ ಆಗ್ರಹ

ಪೈವಳಿಕೆ: ಪಂಚಾಯತ್‌ನ ಬೋಳಂಗಳದಲ್ಲಿ ಇರುವ ಮಾಲಿನ್ಯ ವಿಲೇವಾರಿ ಕೇಂದ್ರದ ಬಳಿ ರಾಶಿ ಬಿದ್ದ ತ್ಯಾಜ್ಯ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದು, ಸ್ಥಳೀಯರ ಆರೋಗ್ಯದ ಬಗ್ಗೆ ಆತಂಕ ಹುಟ್ಟಿಸಿದೆ. ಮನೆಮನೆಗಳಿಂದ ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಯರು ಸಂಗ್ರಹಿಸುವ ಪ್ಲಾಸ್ಟಿಕ್  ತ್ಯಾಜ್ಯವನ್ನು  ಬೋಳಂ ಗಳದಲ್ಲಿರುವ ವಿಲೇವಾರಿ ಕೇಂದ್ರದಲ್ಲಿ ತಂದಿರಿಸಲಾಗುತ್ತಿದೆ. ಇಲ್ಲಿ ಕೇಂದ್ರದೊಳಗೆ ಹಾಗೂ ಹೊರಗೆ ರಾಶಿ ಬಿದ್ದಿರುವ ತ್ಯಾಜ್ಯದಿಂದ ದುರ್ವಾಸನೆ ಪರಿಸರವಿಡೀ ಹರಡುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ನಿರ್ಮಾಣವಾಗಿದೆ. ರಾಜ್ಯದೆಲ್ಲೆಡೆ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪರಿಸರದ ಜನರು ಇನ್ನಷ್ಟು ಆತಂಕಗೊಂಡಿದ್ದಾರೆ.

ಪ್ರತೀ ತಿಂಗಳು ಸಂಗ್ರಹವಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ಸಂಸ್ಕರಿಸಲು ವ್ಯವಸ್ಥೆ ಮಾಡಬೇಕೆಂದು ಪಂಚಾಯತ್ ಆಡಳಿತ ಸಮಿತಿಗೆ ಡಿವೈಎಫ್‌ಐ ಸೂಚಿಸಿದೆ. ಮಳೆಗಾಲಪೂರ್ವ ಶುಚಿತ್ವ ಕಾರ್ಯಕ್ರಮ ಸಂಪೂರ್ಣ ವಿಫಲ ವಾಗಿದ್ದು, ರಾಜ್ಯ ಸರಕಾರ ಇತ್ತೀಚೆಗೆ ಘೋಷಿಸಿದ ಡ್ರೈ ಡೆ ಇಲ್ಲಿ ಘೋಷಣೆ ಯಾಗಿ ಮಾತ್ರ ಉಳಿದಿದೆ ಎಂದು ಡಿಫಿ ಆರೋಪಿಸಿದೆ. ತ್ಯಾಜ್ಯವನ್ನು ತುರ್ತು ತೆರವುಗೊಳಿಸಲು ಪಂಚಾಯತ್ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್‌ಐ ಆಗ್ರಹಿಸಿದ್ದು, ಇಲ್ಲದಿದ್ದರೆ ಮಂಜೇಶ್ವರ ಬ್ಲೋಕ್ ಸಮಿತಿ ನೇತೃತ್ವದಲ್ಲಿ ಜನಾಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

You cannot copy contents of this page