ಕಾಸರಗೋಡು: ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರ ಕರ್ನಾಟಕ ರಾಜ್ಯ ಸಾರಿಗೆ ಬಸ್ (ಕೆಎಸ್ಆರ್ಟಿಸಿ)ಗಳಲ್ಲಿ ಕಾಸರಗೋಡಿನ ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣ ಸೌಕರ್ಯ ಮಂಜೂರು ಮಾಡಿದ್ದು, ಇದಕ್ಕಾಗಿ ಮುಂದಾಳುತ್ವ ವಹಿಸಿದ ಕಾಂಗ್ರೆಸ್ ಕುಂಬಳೆ ಮಂಡಲ ಸಮಿತಿಯನ್ನು ವಿದ್ಯಾರ್ಥಿಗಳು ಹಾಗೂ ರಕ್ಷಕರು ಅಭಿನಂದಿಸಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಪೂಜಾರಿ ಸ್ವಾಗತಿಸಿದ್ದಾರೆ.
ಕಾಸರಗೋಡಿನ ವಿದ್ಯಾರ್ಥಿ ಗಳಿಗೂ ಉಚಿತ ಪ್ರಯಾಣ ಲಭ್ಯಗೊಳಿಸಲು ಸರಕಾರದಿಂದ ಆದೇಶ ಲಭಿಸಿದೆಯೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ. ಪಾಸ್ ಮುಖಾಂತರ ಉಚಿತ ಪ್ರಯಾಣ ಮಾಡಬಹುದಾಗಿದೆ. ಕಲಿಯುವ ಶಿಕ್ಷಣ ಸಂಸ್ಥೆಯ ಪೂರ್ಣ ಮಾಹಿತಿಗಳು ಒಳಗೊಂಡ ಫಾರ್ಮ್ ಮಂಗಳೂರಿನಲ್ಲಿ ಕಲಿಯುವ ವಿದ್ಯಾರ್ಥಿಗಳು ಕರ್ನಾಟಕ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ನೀಡಿ ಪಾಸ್ ಪಡೆಯಬೇಕಾಗಿದೆ. ಕಾಸರಗೋ ಡಿನಲ್ಲಿ ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಸುಮಾರು 5೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆಂದು ಅಂದಾಜಿಸಲಾಗಿದೆ. ಇವರ ಪೈಕಿ ಬಹುಪಾಲು ಮಂದಿ ಈ ಮೊದಲು ರೈಲುಗಳನ್ನು ಆಶ್ರಯಿಸುತ್ತಿದ್ದರು. ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತ ಪ್ರಯಾಣ ಮಂಜೂರು ಮಾಡಿರುವುದು ವಿದ್ಯಾರ್ಥಿಗಳಿಗೆ ಹಾಗೂ ಅವರ ರಕ್ಷಕರಿಗೆ ನೆಮ್ಮದಿ ಮೂಡಿಸಿದೆ. ಇದೇ ವೇಳೆ ಕೇರಳದಿಂದ ಶಿಕ್ಷಣಕ್ಕಾಗಿ ಮಂಗಳೂರಿಗೆ ತೆರಳುವ ವಿದ್ಯಾರ್ಥಿಗಳಿಗೆ ಕೇರಳ ಕೆಎಸ್ಆರ್ಟಿಸಿ ಬಸ್ಗಳಲ್ಲೂ ಉಚಿತ ಪ್ರಯಾಣ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಮಂಡಲ ಕಾಂಗ್ರೆಸ್ ಅಧ್ಯಕ್ಷ ರವಿ ಪೂಜಾರಿ ಕೇರಳ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.







