ಕುಂಬಳೆ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆ ಬಾಯಾರುಪದವು ಕ್ಯಾಂಪ್ಕೋ ಸಮೀಪದ ಮುಹಮ್ಮದ್ ಆಸಿಫ್ (29) ನಿಗೂಢ ರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಡುವ ಸಾಧ್ಯತೆ ಇದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂಬ ಬೇಡಿಕೆಯನ್ನು ಯಾಕಾಗಿ ಅಂಗೀಕರಿಸುತ್ತಿಲ್ಲವೆಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ತಿಳಿಸಿ ಪೊಲೀಸರಿಗೆ ಹೈಕೋರ್ಟ್ ನೋಟೀಸು ನೀಡಿದೆ. ಇದರೊಂದಿಗೆ ನಿಗೂಢತೆಗಳು ತುಂಬಿಕೊಂಡ ಪ್ರಕರಣ ಮತ್ತೆ ಚರ್ಚೆಯಾಗಿದೆ. ಮಗನ ಸಾವಿನ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿ ತಾಯಿ ಸಕೀನ ನ್ಯಾಯವಾದಿ ಆಸಿಫಲಿ ಮುಖಾಂತರ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ನೋಟೀಸಿಗೆ ಉತ್ತರ ಲಭಿಸಿದ ಬಳಿಕ ಸಿಬಿಐ ತನಿಖೆ ನಡೆಸಬೇಕೇ ಎಂಬ ವಿಷಯದಲ್ಲಿ ಹೈಕೋರ್ಟ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
2025 ಜನವರಿ 15ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಒಂದು ಫೋನ್ ಕರೆ ಬಂದ ಹಿನ್ನೆಲೆಯಲ್ಲಿ ಮುಹಮ್ಮದ್ ಆಸಿಫ್ ಮನೆಯಿಂದ ಹೊರಗೆ ತೆರಳಿದ್ದರು. ಅನಂತರ ಮನೆಯಿಂದ ಮೂರು ಕಿಲೋ ಮೀಟರ್ ಅಂತರದ ಪೈವಳಿಕೆ ಕಾಯರ್ಕಟ್ಟೆಯಲ್ಲಿ ರಸ್ತೆ ಬದಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಆಸಿಫ್ ಪತ್ತೆಯಾಗಿದ್ದರು. ರಾತ್ರಿ ಹೊತ್ತಿನಲ್ಲಿ ಗಸ್ತು ನಡೆಸುತ್ತಿದ್ದ ಪೊಲೀಸರು ಇವರನ್ನು ಮೊದಲು ಕಂಡಿದ್ದಾರೆ. ಬಳಿಕ ಆಸಿಫ್ರನ್ನು ಬಂದ್ಯೋಡಿನ ಖಾಸಗಿ ಆಸ್ಪತ್ರೆಗೆ ನಂತರ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈ ಸಂಬಂಧ ಅಸಹಜ ಸಾವು ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದರು. ಲಾರಿಯ ಒಳಗೆ ಹಾಗೂ ಬಾಗಿಲಿನಲ್ಲಿ ರಕ್ತದ ಕಲೆಗಳು ಪತ್ತೆಯಾಗಿತ್ತು. ಸಾವು ಕೊಲೆಕೃತ್ಯವಾಗಿದೆಯೆಂದು ಕುಟುಂಬ ಆರೋಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಜಿಲ್ಲಾ ಕ್ರೈಂಬ್ರಾಂಚ್ಗೆ ವಹಿಸಿಕೊಡಲಾಗಿದೆ. ಪ್ರಸ್ತುತ ಜಿಲ್ಲಾ ಕ್ರೈಂ ಬ್ರಾಂಚ್ ತನಿಖೆ ಮುಂದುವರಿಸುತ್ತಿದೆ. ಈ ಮಧ್ಯೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿ ತಾಯಿ ಹೈಕೋರ್ಟ್ನ್ನು ಸಮೀಪಿಸಿದ್ದಾರೆ.






