ರಾಷ್ಟ್ರೀಯ ಹೆದ್ದಾರಿ: ಸರ್ವೀಸ್ ರಸ್ತೆ ಪ್ರವೇಶಿಸದ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು- ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ

ಕಾಸರಗೋಡು: ಸರ್ವೀಸ್ ರಸ್ತೆಗೆ ಪ್ರವೇಶಿಸದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಸೇವೆ ನಡೆಸುತ್ತಿರುವ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಮೊಗ್ರಾಲ್ ಪುತ್ತೂರು ಘಟಕದ ಮಹಾಸಭೆ ಆಗ್ರಹಪಟ್ಟಿದೆ. ಹಲವು ಬಸ್‌ಗಳು ಸರ್ವೀಸ್ ರಸ್ತೆಗೆ ಪ್ರವೇಶಿಸದೆ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದು ಹೋಗುತ್ತಿವೆ.

ಇದು ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ಇತರ ಪ್ರಯಾಣಿಕರನ್ನು ತೀವ್ರ ಸಂಕಷ್ಟದಲ್ಲಿ ಸಿಲುಕಿಸುವಂತೆ ಮಾಡುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಇದಕ್ಕೆ ತುರ್ತು ಪರಿಹಾರ ಕ್ರಮಕೈಗೊಳ್ಳಬೇಕೆಂದು ಸಭೆ ಆಗ್ರಹಪಟ್ಟಿದೆ.

ಘಟಕದ ಅಧ್ಯಕ್ಷ ಎಸ್.ಎಂ. ನೂರುದ್ದೀನ್ ಸಭೆಯ ಅಧ್ಯಕ್ಷತೆ ವಹಿಸಿದರು. ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಉದ್ಘಾಟಿಸಿದರು. ಜಿಲ್ಲಾಉಪಾಧ್ಯಕ್ಷ ಎ.ಎ. ಅಸೀಸ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಸಮಿತಿಯ ಸದಸ್ಯರಾಗಿರುವ ಅಸೀಸ್ ಕಳತ್ತೂರುರನ್ನು ಈ ಸಂದರ್ಭದಲ್ಲಿ ಅಭಿನಂದಿ ಸಲಾಯಿತು. ಇಕ್ಬಾಲ್ ಯುವರ್ ಚೊಸ್, ಪಿ.ಬಿ. ಅಬ್ದುಲ್ ರಹ್ಮಾನ್, ಗೋಪಿ ಮೊದಲಾದವರು ಮಾತನಾಡಿದರು. ಜಾಬೀರ್ ಕುನ್ನಿಲ್ ಸ್ವಾಗತಿಸಿ, ಜಗದೀಶ್ ಆಚಾರ್ಯ ವಂದಿಸಿದರು.

ಮೊಗ್ರಾಲ್ ಪುತ್ತೂರು ಘಟಕದ ನೂತನ ಪದಾಧಿಕಾರಿಗಳನ್ನಾಗಿ ಎಸ್.ಎಂ. ನೂರುದ್ದೀನ್ (ಅಧ್ಯಕ್ಷ), ಜಾಬೀರ್ ಕುನ್ನಿಲ್ (ಪ್ರಧಾನ ಕಾರ್ಯದರ್ಶಿ), ಜಗದೀಶ್ ಆಚಾರ್ಯ (ಕೋಶಾಧಿಕಾರಿ), ಮೊದೀನ್ ಬಿ.ಎ, ಇಕ್ಬಾಲ್ ಯುವರ್ ಚೊಸ್ (ಉಪಾಧ್ಯಕ್ಷ), ಮುಸ್ತಫ ಅಜಾದ್, ಮುನೀರ್ ಮೊಗರ್ (ಜೊತೆ ಕಾರ್ಯದರ್ಶಿಗಳು), ರಾಮ ಶೆಟ್ಟಿ ಬೆದ್ರಡ್ಕ, ಲತೀಫ್ ಕೋಟೆಕುನ್ನು, ತಿಮ್ಮಪ್ಪ ಮಜಾಲ್ ಮತ್ತು ಅಬ್ದುಲ್ಲ ಎಂಬವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.

You cannot copy contents of this page