ಕಾಸರಗೋಡು: ಮುಖ್ಯಮಂತ್ರಿ ವಿ.ಡಿ. ಸತೀಶನ್ ವಿಧಾನಸಭೆಯಲ್ಲಿ ನಿನ್ನೆ ಮಂಡಿಸಿದ ಯುಡಿಎಫ್ ಸರಕಾರದ ಚೊಚ್ಚಲ ಬಜೆಟ್ನಲ್ಲಿ ಕಾಸರಗೋಡು ಜಿಲ್ಲೆಗಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.
ಕಾಸರಗೋಡಿನಲ್ಲಿ ಐಟಿ ಪಾರ್ಕ್ ಸ್ಥಾಪಿಸಲಾಗುವುದು, ಚಂದ್ರಗಿರಿ ಕೋಟೆ ಮತ್ತು ಪರಿಸರ ಪ್ರದೇಶವನ್ನು ಹೆರಿಟೇಜ್ (ಪರಂಪರಾಗತ) ಪ್ರವಾಸಿ ಕೇಂದ್ರವನ್ನಾಗಿ ಭಡ್ತಿಗೊಳಿಸಲಾಗುವುದು. ಇದು 20 ಕೋಟಿ ರೂ. ವೆಚ್ಚ ನಿರೀಕ್ಷೆಯ ಯೋಜನೆಯಾಗಿದೆ.
ಚೀಮೇನಿಯ ಕಿನ್ಫ್ರಾ ಪಾರ್ಕ್ಗೆ ಸೇರಿರುವ ಸ್ಥಳದಲ್ಲ್ಲಿ ಲಾಜಿಸ್ಟಿಕ್ ಹೈಟೆಕ್ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಲಾಗು ವುದು. ಆ ಯೋಜನೆಗಳಿಗೆ ಬಜೆಟ್ನಲ್ಲಿ 10 ಕೋಟಿ ರೂ.ಗಳ ಟೋಕನ್ ಹಣ ಮೀಸಲಿರಿಸಲಾಗಿದೆ. ಇದು ಒಟ್ಟಾರೆಯಾಗಿ 70 ಕೋಟಿ ರೂ. ವೆಚ್ಚ ನಿರೀಕ್ಷಿಸುವ ಯೋಜನೆಗಳಾಗಿವೆ.
ಕುಂಬಳೆ ಆರಿಕ್ಕಾಡಿ ಕಡವಿನಲ್ಲಿ 10 ಕೋಟಿ ವೆಚ್ಚದಲ್ಲಿ ಫಿಶ್ಲ್ಯಾಂಡಿಂಗ್ ಸೆಂಟರ್ ನಿರ್ಮಿಸಲಾಗುವುದು. ಇದಕ್ಕಾಗಿ ಬಜೆಟ್ನಲ್ಲಿ 20 ಲಕ್ಷ ರೂ. ಮೀಸಲಿರಿಸ ಲಾಗಿದೆ. ವಲಿಯಪರಂ ಬಿನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಬೀಚ್ ಫೆಸಿಲಿಟೇಶನ್ ಸೆಂಟರ್ ಸ್ಥಾಪಿಸಲಾಗುವುದು. ಮನುಷ್ಯ ಮತ್ತು ವನ್ಯಜೀವಿ ಸಂಘರ್ಷ ತಡೆಗಟ್ಟುವ ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಯನ್ನು ಒಳಪಡಿಸಲಾಗುವುದು. ಎಂಡೋಸಲ್ಫಾನ್ ಸಂತ್ರಸ್ತರ ಕುಟುಂಬಗಳ ಸಂರಕ್ಷಣೆಯನ್ನು ಸರಕಾರ ವಹಿಸಿಕೊಳ್ಳ ಲಿದೆ. ಕಾಸರಗೋಡು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕೆಲಸವನ್ನು ಶೀಘ್ರ ಪೂರ್ತೀಕರಿಸಲಾಗುವುದು. ಜಿಲ್ಲೆಯ ಮಣ್ಣಿನ ಪಾತ್ರ ತಯಾರಿಸುವ ಕಾರ್ಮಿಕರಿಗೆ ವಿಶೇಷ ಸವಲತ್ತುಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ.
ಟೈಪ್-1 ಮಧುಮೇಹ ರೋಗಗಲಿರುವ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ಮತ್ತು ಆರೋಗ್ಯ ಸಂರಕ್ಷಣೆ ಒದಗಿಸಲು ರಾಜ್ಯ ಸರಕಾರ ಜ್ಯಾರಿಗೊಳಿಸಿರುವ ಮಿಠಾಯಿ ಯೋಜನೆಯ ಪ್ರಯೋಜನ ಜಿಲ್ಲೆಗೂ ಲಭಿಸುವಂತೆ ಮಾಡಲಾಗುವುದು.
ಮಲಬಾರ್ ಮುಜರಾಯಿ ಮಂಡಳಿಗೊಳಪಟ್ಟ ಸಿಬ್ಬಂದಿಗಳು ಎದುರಿಸುತ್ತಿರವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಉಪ್ಪಳದಲ್ಲಿ ಮಂಜೇಶ್ವರ ತಾಲೂಕು ಕಚೇರಿಯನ್ನು ಮಿನಿ ಸಿವಿಲ್ ಸ್ಟೇಷನ್ ಆಗಿ ಭಡ್ತಿಗೊಳಿಸಲಾಗುವುದು. ರಾಜ್ಯದಲ್ಲಿ ಹೊಸ ಜಿಲ್ಲೆಗಳು ಹಾಗೂ ತಾಲೂಕುಗಳಿಗೆ ರೂಪು ನೀಡಲಾಗುವುದೆಂದು ಬಜೆಟ್ನಲ್ಲಿ ನೀಡಲಾಗಿರುವ ಭರವಸೆ ಕಾಸರಗೋಡು ಜಿಲ್ಲೆಯಲ್ಲಿ ಹೊಸ ತಾಲೂಕು ರಚನೆಗಿರುವ ನಿರೀಕ್ಷೆಯನ್ನು ಹುಟ್ಟಿಸಿದೆ.
ರಾಜ್ಯದಲ್ಲಿ ಜ್ಯಾರಿಗೊಳಿಸ ಲಾಗುವ ಮಿಶನ್ ಸಮುದ್ರ ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಯನ್ನು ಒಳಪಡಿಸ ಲಾಗುವುದು. ಈ ಯೋಜನೆಗಾಗಿ ಬಜೆಟ್ನಲ್ಲಿ ಒಟ್ಟಾರೆಯಾಗಿ 400 ಕೋಟಿ ರೂ.ವನ್ನು ಮೀಸಲಿರಿಸಲಾಗಿದೆ.
ವಿದ್ಯುತ್ ದಾಸ್ತಾನಿರಿಸಿ ಅಗತ್ಯ ವೇಳೆಯಲ್ಲಿ ವಿತರಿಸುವ ಕಮ್ಯೂನಿಟಿ ಆಧಾರಿತ ಬ್ಯಾಟರಿ ಎನರ್ಜಿ ಸ್ಟೋರೇಜ್ನ್ನು ಜಿಲ್ಲೆಯ ಆಯ್ದ ಪಂಚಾಯತ್ಗಳಲ್ಲಿ ಸ್ಥಾಪಿಸಲಾಗುವುದು. ಮಂಜೇಶ್ವರ ಮೀನುಗಾರಿಕಾ ಬಂದರಿನ ಬಡಗು ಭಾಗದಲ್ಲಿ ಲೋವರ್ ಜೆಟ್ಟಿ ನಿರ್ಮಿಸಲಾಗುವುದು. ಇದಕ್ಕೆ ಬಜೆಟ್ನಲ್ಲಿ 20 ಲಕ್ಷ ರೂ. ಮೀಸಲಿರಿಸಲಾಗಿದೆ. ಮೊಗ್ರಾಲ್ ಪೇರಾಲ್ ರಸ್ತೆಗಾಗಿ 30 ಲಕ್ಷರೂ., ಕಾಲಿಕಡವು-ಕರುವಾಂಚೇರಿ-ಪರಪ್ಪಚ್ಚಾಲ್ ರಸ್ತೆಗೆ 40 ಲಕ್ಷ ರೂ., ಪಾಣತ್ತೂರು-ಕುಂಡುಪಳ್ಳಿ-ರಾಣಿಪುರ ರಸ್ತೆಯ ಅಭಿವೃದ್ಧಿಗೆ ೨೦ ಲಕ್ಷ ರೂ., ಹೊಸದುರ್ಗ ಟೌನ್ ಹಾಲ್ ನಿರ್ಮಾಣಕ್ಕೆ 40 ಲಕ್ಷ ರೂ., ನೀಲೇಶ್ವರ ಬ್ಲೋಕ್ ಕಚೇರಿ-ಪಾಲಾಯಿ ಪಾಲಾಯಿ ಶೆಟರ್ ಕಮ್ ಬ್ರಿಡ್ಜ್, ಕಯ್ಯೂರು ರಸ್ತೆಯ ಟಾರಿಂಗ್ಗಾಗಿ 40 ಲಕ್ಷ ರೂ.ವನ್ನು ಬಜೆಟ್ನಲ್ಲಿ ಮೀಸಲಿರಿಸಲಾಗಿದೆ. ಕಾಸರಗೋಡು ಟೌನ್ ಹಾಲ್ ಪುನರ್ ನಿರ್ಮಿಸಲಾಗುವುದು, ಕಾಸರಗೋಡು ಮೀನು ಮಾರುಕಟ್ಟೆ ಮತ್ತು ಕಾಸರಗೋಡು ನಾಯಕ್ಸ್ ರಸ್ತೆಯನ್ನು ನವೀಕರಿಸಲಾಗುವುದು. ಮುಳಿಯಾರು ಬಾವಿಕ್ಕೆರೆ ಕಿರು ಅಣೆಕಟ್ಟಿನ ಬಳಿ ಸೇತುವೆ ನಿರ್ಮಿಸಲಾಗುವುದು, ಶಿರಿಯಾದಲ್ಲಿ ರೈಲ್ವೇ ಅಂಡರ್ ಪ್ಯಾಸೇಜ್ ನಿರ್ಮಿಸುವುದು ಸೇರಿದಂತೆ ಜಿಲ್ಲೆಯಲ್ಲಿ ಇತರ ಹಲವು ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ.






