ಯುವಕನನ್ನು ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆಗೈದು ಕೊಲೆಯತ್ನ: ಯುವತಿ ಸಹಿತ 3 ಮಂದಿ ಸೆರೆ

ತಿರುವನಂತಪುರ: ಯುವಕನನ್ನು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಯುವತಿ ಸಹಿತ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಲೆಯಾಂಕೀಳ್ ಅರವಿಪ್ಪಾರ ತೆಕ್ಕೇವಿಳ ನಿವಾಸಿ ಸುಜಿತ್  (32), ಆದಿರ ನಿಲಯದ ಅಭಿಲಾಷ್ (39), ಅಭಿಲಾಷ್ ಜೊತೆ ವಾಸ ಮಾಡುತ್ತಿದ್ದ ಕಾಯಂಕುಳಂ ವಳ್ಳಿಕುನ್ನು ನಿವಾಸಿ ಸರಿತ (37) ಎಂಬಿವರು ಸೆರೆಯಾದವರು.

ತಿರುವನಂತಪುರ ವೆಂಬಾಯಂ ಪುತ್ತನ್‌ವಿಳ ನಿವಾಸಿ ಶರತ್ (37)ನನ್ನು ಇವರು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆಗೈದು ಕೊಲ್ಲಲು ಯತ್ನಿಸಿದ್ದರು. 2021ರಲ್ಲಿ ಕರಮನದ ವೈಶಾಖ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ ಸುಜಿತ್ ಹಾಗೂ ಅಭಿಲಾಷ್. ಅಭಿಲಾಷ್‌ನ ಪತ್ನಿ ಕಳವು ಕೇಸಿನಲ್ಲಿ ಜೈಲಿನಲ್ಲಿದ್ದಳು. ಈಕೆ ಜೈಲಿಗೆ ಹೋಗಲು ಕಾರಣ ಶರತ್ ಆಗಿದ್ದಾನೆ ಎಂಬ ಶಂಕೆಯಿಂದ ಕೊಲ್ಲಲು ಯತ್ನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆರೋಪಿಗಳು ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿಗೆ ಶರತ್‌ನನ್ನು ಕರೆಮಾಡಿ ಬರಹೇಳಿದ ಬಳಿಕ ಆಕ್ರಮಿಸಲಾಗಿದೆ. ಆಕ್ರಮಣದಿಂದ ಪ್ರಜ್ಞಾಹೀನನಾಗಿ ಬಿದ್ದಿದ್ದ ಶರತ್ ಮೃತಪಟ್ಟನು ಎಂದು ಗ್ರಹಿಸಿ ಅಲ್ಲಿಂದ ಅಕ್ರಮಿಗಳು ಪರಾರಿಯಾಗಿದ್ದರು. ದೀರ್ಘ ಸಮಯದ ಬಳಿಕ ಪ್ರಜ್ಞೆ ಬಂದ ಶರತ್ ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಈಗ ಬಂಧಿಸಲಾಗಿದೆ.

You cannot copy contents of this page