ಕೋಳಿ ಸಾಗಾಟ ಮರೆಯಲ್ಲಿ ಕಳ್ಳತನ: ರಾಷ್ಟ್ರೀಯ ಹೆದ್ದಾರಿಯಲ್ಲಿರಿಸಿದ್ದ 10 ಬ್ಯಾರಲ್ ಕಳವುಗೈದ ಚಾಲಕ ಸೆರೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ  ಡಿವೈಡರ್‌ಗಾಗಿ ಇರಿಸಿದ್ದ 10 ಬ್ಯಾರಲ್‌ಗಳನ್ನು ಕಳವುಗೈದು ಟೆಂಪೋದಲ್ಲಿ ಸಾಗಿಸುತ್ತಿದ್ದ ಚಾಲಕ ಸೆರೆಗೀಡಾಗಿದ್ದಾನೆ. ಚಿಕ್ಕಮಗಳೂರು ನಿವಾಸಿ ವಿನಯ ಕುಮಾರ್ (29) ಎಂಬಾತ ಸೆರೆಗೀಡಾದ ಆರೋಪಿ. ಶಿರಿಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಕಾಮಗಾರಿಯ ಅಂಗವಾಗಿ ಗುತ್ತಿಗೆದಾರ ಕಂಪೆನಿಯಾದ ಊರಾಲುಂಗಲ್ ಸೊಸೈಟಿ ಅಧಿಕಾರಿಗಳು ಡಿವೈಡರ್ ಆಗಿ ಇರಿಸಿದ್ದ 10 ಬ್ಯಾರಲ್‌ಗಳನ್ನು ಕಳವುಗೈದು ಸಾಗಿಸುತ್ತಿದ್ದಾಗ ಈತ ಸೆರೆಗೀಡಾಗಿದ್ದಾನೆ. ಈ ಹಿಂದೆಯೂ ಈತ ಇದೇ ರೀತಿಯ ಕಳವು ಕೃತ್ಯ  ನಡೆಸಿದ್ದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಈತನ ಮೇಲೆ ನಿಗಾ ಇರಿಸಿದ್ದರು. ಕೋಳಿ ಸಾಗಾಟ ನಡೆಸಿ ಮರಳುತ್ತಿದ್ದಾಗ ಈತ ಬ್ಯಾರಲ್‌ಗಳನ್ನು ಕಳವುಗೈದು ಟೆಂಪೋದಲ್ಲಿ ಸಾಗಿಸುತ್ತಿದ್ದನೆನ್ನಲಾಗಿದೆ. ನಿನ್ನೆಯೂ ಈತ ಬ್ಯಾರಲ್‌ಗಳನ್ನು ಸಾಗಿಸಲು ಯತ್ನಿಸುತ್ತಿದ್ದಾಗ ಕಾರ್ಮಿಕರು ವಾಹನವನ್ನು ತಡೆದು ನಿಲ್ಲಿಸಿ ವಿನಯ ಕುಮಾರ್‌ನನ್ನು ಸೆರೆ ಹಿಡಿದು ಪೊಲೀಸರಿಗೆ ವಿಷಯ ತಿಳಿಸಿದ್ದರು. ಕುಂಬಳೆ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದಲ್ಲಿ ಎಸ್‌ಐ ಶ್ರೀಜೇಶ್, ಪೊಲೀಸ್ ಚಂದ್ರನ್ ಎಂಬಿವರು ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ. ಟೆಂಪೋವನ್ನು ಕಸ್ಟಡಿಗೆ ತೆಗೆಯಲಾಗಿದೆ.

10,000 ರೂ. ಮೌಲ್ಯದ ಬ್ಯಾರಲ್‌ಗಳನ್ನು ಆರೋಪಿ ಸಾಗಿಸಲೆತ್ನಿಸಿರುವುದಾಗಿ ಗುತ್ತಿಗೆದಾರ ಕಂಪೆನಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page