ತುಂಡಾಗಿ ನಿಂತ ವಿದ್ಯುತ್ ಕಂಬದಿಂದ ಅಪಾಯಭೀತಿ: ದೂರು ನೀಡಿದರೂ ಅಧಿಕಾರಿಗಳು ಮೌನ
ಕುಂಬಳೆ: ವಿದ್ಯುತ್ ಕಂಬವೊಂದು ತುಂಡಾಗಿ ನಿಂತಿದ್ದು, ಯಾವುದೇ ಕ್ಷಣ ದಲ್ಲಿ ಧರೆಗೆ ಅಪ್ಪಳಿಸುವ ಸ್ಥಿತಿಯಲ್ಲಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕಂಬ ತೆರವುಗೊಳಿಸಿ ಹೊಸ ಕಂಬ ಸ್ಥಾಪಿಸಲು ಕ್ರಮ ಉಂಟಾಗಿಲ್ಲ ವೆಂಬ ಆರೋಪ ಕೇಳಿಬಂದಿದೆ.
ಕಟ್ಟತ್ತಡ್ಕ ಜಂಕ್ಷನ್ನಲ್ಲಿ ಅಪಾಯ ಭೀತಿ ಸೃಷ್ಟಿಸುವ ವಿದ್ಯುತ್ ಕಂಬವಿದೆ. ಇದು ಅರ್ಧದಿಂದ ತುಂಡಾದ ಈ ಕಂಬ ಮರವೊಂದನ್ನು ಆಧಾರಿಸಿ ನಿಂತಿದೆ, ಜೋರು ಗಾಳಿ, ಮಳೆಗೆ ಈ ಕಂಬ ನೆಲಕ್ಕುರುಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಈ ಕಂಬವನ್ನು ಶೀಘ್ರ ತೆರವುಗೊಳಿಸಬೇಕೆಂದು ಆಗ್ರಹಿಸಿ ಕಿಸಾನ್ ಸೇನೆ ಜಿಲ್ಲಾ ಕಾರ್ಯದರ್ಶಿ ಶುಕೂರ್ ಕಾಣಾಜೆ ಕಳೆದ ಮಾರ್ಚ್ನಲ್ಲಿ ಕೆಎಸ್ಇಬಿ ಸೀತಾಂಗೋಳಿ ಸೆಕ್ಷನ್ ಕಚೇರಿಯ ಅಸಿಸ್ಟೆಂಟ್ ಇಂಜಿನಿಯರ್ಗೆ ಮನವಿ ಸಲ್ಲಿಸಿದ್ದರು. ಆದರೆ ಮೇ ತಿಂಗಳವರೆಗೆ ಯಾವುದೇ ಕ್ರಮ ಉಂಟಾಗಿಲ್ಲ. ಈ ಹಿನ್ನೆಲೆಯಲ್ಲಿ ಶುಕೂರ್ ಕಾಣಾಜೆ ಮೇ ೨೨ರಂದು ಕೆಎಸ್ಇಬಿ ದೂರು ಪರಿಹಾರ ಸೆಲ್ಗೆ ಇದೇ ಬೇಡಿಕೆ ಮುಂದಿರಿಸಿ ಮನವಿ ಸಲ್ಲಿಸಿದ್ದರು. ಅದಕ್ಕೆ ಉತ್ತರವಾಗಿ ದೂರನ್ನು ಕೆಎಸ್ಇಬಿ ಸೀತಾಂಗೋಳಿ ಸೆಕ್ಷನ್ ಅಸಿಸ್ಟೆಂಟ್ ಇಂಜಿನಿಯರ್ಗೆ ಹಸ್ತಾಂತರಿಸಿದ್ದು ಶೀಘ್ರ ಆ ಬಗ್ಗೆ ಕ್ರಮ ಕೈಗೊಳ್ಳಬಹುದೆಂದು ತಿಳಿಸಲಾಗಿದೆ. ಆದರೆ ಮೇ ತಿಂಗಳು ಕೊನೆಗೊಂಡರೂ ವಿದ್ಯುತ್ ಕಂಬದತ್ತ ಅಧಿಕಾರಿಗಳು ಕಣ್ಣೆತ್ತಿಯೂ ನೋಡಿಲ್ಲ. ಇದೇ ಸ್ಥಿತಿ ಮುಂದುವರಿದರೆ ವಿದ್ಯುತ್ ಕಂಬ ತುಂಡಾಗಿ ಬಿದ್ದು ಅಪಾಯ ಸಾಧ್ಯತೆಯಿದೆ ಎಂದು ಶುಕೂರ್ ಕಾಣಾಜೆ ಸಹಿತ ನಾಗರಿಕರು ತಿಳಿಸುತ್ತಿದ್ದಾರೆ.