ಹೋಟೆಲ್ನಲ್ಲಿ ತಪಾಸಣೆಗೆ ತಲುಪಿದ ಅಬಕಾರಿ ಅಧಿಕಾರಿಗೆ ಹಲ್ಲೆ: ಆರೋಪಿಗೆ ಎರಡು ವರ್ಷ ಸಜೆ, ದಂಡ
ಕಾಸರಗೋಡು: ಹೋಟೆಲ್ನಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ತಪಾಸಣೆಗೆ ತೆರಳಿದ ಅಬಕಾರಿ ಅಧಿಕಾರಿ ಮೇಲೆ ಹಲ್ಲೆಗೈದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣದಲ್ಲಿ ಆರೋಪಿಗೆ ಕಾಸರಗೋಡು ಅಡಿಶನಲ್ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಪ್ರಿಯ ಕೆ. ಅವರು ಎರಡು ವರ್ಷ ಸಜೆ ಹಾಗೂ 20,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಕೊಯಿಪ್ಪಾಡಿ ಗ್ರಾಮದ ಕುಂಟಂಗೇರಡ್ಕ ನಿವಾಸಿ ಅಣ್ಣಿ ಪ್ರಭಾಕರ (61) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. 2021 ಎಪ್ರಿಲ್ 2ರಂದು ರಾತ್ರಿ 8ಗಂಟೆಗೆ ಆರೋಪಿಯು ಕುಂಟಂಗೇರಡ್ಕದಲ್ಲಿ ನಡೆಸುತ್ತಿದ್ದ ಹೋಟೆಲ್ನಲ್ಲಿ ತಪಾಸಣೆಗೆ ತಲುಪಿದ ಅಬಕಾರಿ ಅಧಿಕಾರಿ ವಿನೋದ್ರ ತಲೆಗೆ ತಕ್ಕಡಿಯಿಂದ ಹಲ್ಲೆಗೈದು ಗಾಯಗೊಳಿಸಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ನಡೆದಿತ್ತು. ಈ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಬಳಿಕ ತನಿಖೆ ನಡೆಸಿ ಅಂದಿನ ಎಸ್.ಐ. ಎಂ. ಮನೋಜ್ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರವಾಗಿ ಅಡಿಶನಲ್ ಗವರ್ನಮೆಂಟ್ ಪ್ಲೀಡರ್ ಚಂದ್ರಮೋಹನ್ ಜಿ, ನ್ಯಾಯವಾದಿ ಚಿತ್ರಕಲ ಎಂ. ಎಂಬಿವರು ಹಾಜರಾಗಿದ್ದರು